ಅಪಘಾತದಲ್ಲಿ ಗಾಯಗೊಂಡು ಕೆಎಲ್ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೆಂದ್ರದಲ್ಲಿ ಮೆದಳು ನಿಷ್ಕ್ರೀಯಗೊಂಡು ಜೀವನ್ಮರಣದ ನಡುವೆ ಹೋರಾಡುತ್ತಿದ್ದ ವ್ಯಕ್ತಿಯು ತನ್ನ ಅಂಗಾಂಗಳನ್ನು ದಾನ ಮಾಡಿ 4 ಜನರ ಜೀವ ಉಳಿಸಿ ಮಾದರಿಯಾಗಿದ್ದಾರೆ. ಆಸ್ಪತ್ರೆಯಲ್ಲಿರುವ ರೋಗಿಗಳಿಗೆ ಹೊಂದಿಕೊಳ್ಳದೇ ಇದ್ದಾಗ ಲೀವರ (ಜಠರ) ಅನ್ನು ಬೆಂಗಳೂರು ಹಾಗೂ ಕಿಡ್ನಿಗಳನ್ನು ಹುಬ್ಬಳ್ಳಿ ಮತ್ತು ಧಾರವಾಡಕ್ಕೆ ಕಳುಹಿಸಿಕೊಡಲಾಯಿತು. ಪೊಲೀಸರು ಸಂಪೂರ್ಣವಾಗಿ ಜೀರೋ ಟ್ರಾಫಿಕ್ ಅಥವಾ ಗ್ರೀನ ಕಾರಿಡಾರ (ಹಸಿರು ಪಥ) ಮೂಲಕ ಅಂಗಾಂಗಳನ್ನು ಸ್ಥಳಾಂತರಿಸಲು ಅವಕಾಶ ಕಲ್ಪಿಸಿಕೊಟ್ಟರು.
ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಕೃಷಿ ಕಾಯಕದ ಕುಟುಂಬದ 50 ವರ್ಷದ ವ್ಯಕ್ತಿಯು ದ್ವೀಚಕ್ರ ವಾಹನ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದರು. ಮೆದುಳಿಗೆ ತೀವ್ರತರವಾದ ಗಾಯವಾದ್ದರಿಂದ ನಿಷ್ಕ್ರೀಯಗೊಂಡು ತನ್ನ ಕಾರ್ಯವನ್ನು ನಿಲ್ಲಿಸಿದ್ದರು.

ಆದರೆ ಅಂಗಾಂಗಳು ಕಾರ್ಯನಿರ್ವಹಿಸುತ್ತಿದ್ದವು. ಮೆದುಳು ನಿಷ್ಕ್ರೀಯಗೊಂಡ ವ್ಯಕ್ತಿಯ ಸಹೋದರರು, ಪತ್ನಿ ಹಾಗೂ ಕುಟುಂಬ ಸದಸ್ಯರಿಗೆ ಆಪ್ತಸಮಾಲೋಚನೆ ಮಾಡಿ, ನಿಮ್ಮ ವ್ಯಕ್ತಿ ನೀಡುವ ಅಂಗಾಂಗಳಿಂದ ಇನ್ನೊಬ್ಬರ ಜೀವ ಉಳಿಯುತ್ತದೆ ಎಂದು ಹೇಳಿದಾಗ, ಸ್ವಿಚ್ಚೆಯಿಂದ ಅಂಗಾಂಗಗಳನ್ನು ದಾನ ಮಾಡಲು ಒಪ್ಪಿದರು.

ಮೆದುಳು ನಿಷ್ಕ್ರೀಯಗೊಂಡ ವ್ಯಕ್ತಿಯ ಲೀವರ ಮತ್ತು ಕಿಡ್ನಿಗಳನ್ನು ಶಸ್ತ್ರಚಿಕಿತ್ಸೆ ಮೂಲಕ ಹೊರತೆಗೆದು, ಲೀವರ ಅನ್ನು ಹುಬ್ಬಳ್ಳಿಯ ವಿಮಾನ ನಿಲ್ದಾಣದವರಗೆ ರಸ್ತೆ ಮೂಲಕ ತೆರಳಿ ಅಲ್ಲಿಂದ, ವಿಮಾನದಲ್ಲಿ ಬೆಂಗಳೂರಿಗೆ ತೆಗೆದುಕೊಂಡು ಹೋದರೆ, ಕಿಡ್ನಿಗಳನ್ನು ಹುಬ್ಬಳ್ಳಿಯ ತತ್ವಾದರ್ಶ ಹಾಗೂ ಎಸಡಿಎಂ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಚರ್ಮವನ್ನು ಕೆಎಲ್ಇ ರೋಟರಿ ಸ್ಕಿನ್ ಬ್ಯಾಂಕ ಹಾಗೂ ನೇತ್ರಗಳನ್ನು ಕೆಎಲ್ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆಯ ಆಯ್(ನೇತ್ರ) ಬ್ಯಾಂಕಗೆ ದಾನ ಮಾಡಿದರು. ಚರ್ಮವನ್ನು ಸುಟ್ಟ ಗಾಯಗಳಿಂದ ಬಳಲುವ ರೋಗಿಗಳಿಗೆ ಸ್ಕಿನ್ ಗ್ರಾಫ್ಟಿಂಗ ಮಾಡಿದರೆ, ಕಣ್ಣುಗಳನ್ನು ಇಬ್ಬರು ಅಂಧರಿಗೆ ಕಸಿ ಮಾಡಲಾಗುತ್ತದೆ. ಇಬ್ಬರು ಅಂಧರ ಬಾಲಿಗೆ ಬೆಳಕಾಗಿದ್ದಾರೆ.

ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕವಾಗಿ ಹಿಂದುಳಿದಿದ್ದ ಕೃಷಿ ಕಾಯಕದ ವ್ಯಕ್ತಿ ಅಂಗಾಂಗ ದಾನ ಮಾಡುವದರ ಮೂಲಕ ಮಾದರಿಯಾಗಿದ್ದಾರೆ. ಹಳ್ಳಿಯಲ್ಲಿದ್ದರೂ ಕೂಡ ಅಂಗಾಂಗಳನ್ನು ದಾನ ಮಾಡುವದರಿಂದ ಇನ್ನೊಬ್ಬರ ಜೀವ ಉಳಿಯುತ್ತದೆ ಎಂಬುದನ್ನು ಅರಿತುಕೊಂಡ ಕುಟುಂಭವು ಸ್ವಇಚ್ಚೆಯಿಂದ ನೀಡಲು ಮುಂದೆ ಬಂದಿತು. ಮೃತಪಟ್ಟರೆ 4 ಜನರ ಜೀವ ಉಳಿಸಿದ ಸಾರ್ಥಕತೆ ಮೆರೆದರು. ಬೆಳಗಾವಿ ಹಾಗೂ ಹುಬ್ಬಳ್ಳಿ ಪೊಲೀಸ ಇಲಾಖೆಯ ಕಾರ್ಯ ಅತ್ಯಂತ ಶ್ಲಾಘನೀಯವಾದ್ದು. ಅತ್ಯಂತ ಜನಸಂದಣಿ ಹಾಗೂ ಸಂಚಾರ ದಟ್ಟಣೆಯಿಂದ ಕೂಡಿದ ರಸ್ತೆಯಲ್ಲಿ ಗ್ರೀನ್ ಕಾರಿಡಾರ ನಿರ್ಮಿಸಿ ಅಂಗಾಂಗಳನ್ನು ಶೀಘ್ರ ಸ್ಥಳಾಂತರಿಸಲು ಅವಕಾಶ ಕಲ್ಪಿಸಿಕೊಟ್ಟರು.

ಈ ತಂಡದಲ್ಲಿ ಕೆಎಲ್ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆಯ ಮೂತ್ರಕೋಶ ವಿಭಾಗದ ಡಾ. ಆರ್ ಬಿ ನೇರ್ಲಿ, ಡಾ. ರಿತೇಶ ವೆರ್ನೆಕರ, ಬಿಜಿಎಸ್ ಗ್ಲೋಬ್ನ ಡಾ. ಸುನೀಲ ಶೇನ್ವಿ ಹಾಗೂ ಅವರ ತಂಡ, ಟ್ರಾನ್ಸಪ್ಲ್ಯಾಂಟ ಕೋಆರ್ಡಿನೇಟರಗಳಾದ ಡಾ. ಪ್ರಮೋದ ಸುಳಿಕೇರಿ, ನೀರಜ ದೀಕ್ಷಿತ, ಆರ್ ಜಿ ಪಾಟೀಲ, ವಿನಾಯಕ ಪುರಾಣಿಕ, ಜೀವಸಾರ್ಥಕತೆಯ ಮನೋಜ ನಾಯಕ, ಶೀತಲ ಮುಂಡದಾ ಸೇರದಂತೆ ಮುಂತಾದವರು ಉಪಸ್ಥಿತರಿದ್ದರು.
ಅಂಗಾಂಗಳನ್ನು ದಾನ ಮಾಡಿದ ವ್ಯಕ್ತಿ ಹಾಗೂ ಆತನ ಕುಟುಂಬ ಸದಸ್ಯರ ಕಾರ್ಯವನ್ನು ಸಂಸ್ಥೆಯ ಕಾರ್ಯಾಧ್ಯಕ್ಷರಾದ ಡಾ. ಪ್ರಭಾಕರ ಕೋರೆ, ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರಾದ ಡಾ. ಎಂ ವಿ ಜಾಲಿ ಹಾಗೂ ಆಡಳಿತ ಮಂಡಳಿ ಸದಸ್ಯರು ಅಭಿನಂದಿಸಿದ್ದಾರೆ.