ಅಧ್ಯಯನಕ್ಕೆ ರೋಗಿಗಳ ದಾಖಲೆ ಸಂಗ್ರಹಿಸಿ: ಡಾ. ಬಡಾದಾ

ಭಾರತವು ಸುಮಾರು 80 ಮಿಲಿಯನ್‌ಗೂ ಅಧಿಕ ಮಧುಮೇಹಿಗಳನ್ನು ಹೊಂದಿರುವ ವಿಶ್ವದ ಮಧುಮೇಹಿಗಳ ರಾಜ್ಯಧಾನಿ. ಮಧುಮೇಹ ಬೆಳವಣಿಗೆಯನ್ನು ತಡೆಗಟ್ಟಲು ಹಾಗೂ ಅದನ್ನು ಸಹಜತೆಗೆ ತರಲು ಸಂಶೋಧನೆಗಳ ಅತ್ಯಗತ್ಯ. ಪಾಶ್ಚಿಮಾತ್ಯ ದೇಶಗಳ ಜನಸಂಖ್ಯೆಯನ್ನು ಆಧರಿಸಿ ಅಧ್ಯಯನ ಹಾಗೂ ಸಂಶೋಧನೆಯನ್ನು ಮಾಡುತ್ತಿದ್ದು, ಸ್ಥಳೀಯವಾಗಿರುವ ವೈದ್ಯರು ಹಾಗೂ ವೈದ್ಯಕೀಯ ಮಹಾವಿದ್ಯಾಲಯಗಳು ದೇಶದ ಜನಸಂಖ್ಯೆಯ ಹಾಗೂ ರೋಗಿಗಳ ಪ್ರತ್ಯೇಕವಾದ ಅಂಕಿಸಂಖ್ಯೆ ಹಾಗೂ ರೋಗದ ದಾಖಲೆಗಳನ್ನು ಸಂಗ್ರಹಿಸಿಡುವ ಕಾರ್ಯ ಮಾಡಬೇಕು. ಅದಕ್ಕೆ ತಕ್ಕಂತೆ ಸಮಗ್ರ ಮಾಹಿತಿಗಳನ್ನೊಳಗೊಂಡ ಮಾಹಿತಿ ಕೋಶವನ್ನು ಕಲೆ ಹಾಕಬೇಕು. ಅಂದಾಗ ಮಾತ್ರ ಪರಿಣಾಮಕಾರಿಯಾದ ಚಿಕಿತ್ಸೆ ನೀಡಲು ಸಾಧ್ಯ. ಆದ್ದರಿಂದ ಸಾರ್ವಜನಿಕರು ಕೂಡ ರೋಗದ ಇತಿಹಾಸವನ್ನು ಚಿಕಿತ್ಸೆ ನೀಡುವ ವ್ಶೆದ್ಯರಿಗೆ ನೀಡಬೇಕು ಎಂದು ಭಾರತೀಯ ಎಂಡೋಕ್ರಿನಾಲಾಜಿ ಸಂಘದ ಅಧ್ಯಕ್ಷರಾದ ಡಾ. ಸಂಜಯ ಬಡಾದಾ ಅವರಿಂದಿಲ್ಲಿ ಹೇಳಿದರು.

ಬೆಳಗಾವಿಯ ಕಾಹೆರನ ಜೆಎನ್ ವೈದ್ಯಕೀಯ ಮಹಾವಿದ್ಯಾಲಯ, ಕೆಎಲ್‌ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರದ ಎಂಡೋಕ್ರಿನಾಲಾಜಿ ವಿಭಾಗವು ದಿ. 6 ಮೇ 2023 ರಂದು ಏರ್ಪಡಿಸಿದ್ದ ಕರ್ನಾಟಕ ಎಂಡೋಕ್ರಿನಾಲಾಜಿ ಸೊಸಾಯಿಟಿಯ 5ನೇ ವಾರ್ಷಿಕ ಸಮ್ಮೇಳನ ಹಾರ್ಮೋನ್ ರಿಧಮ್ -2023 ಅನ್ನು ಉದ್ಘಾಟಿಸಿ ಮಾತನಾಡಿದ ಅವರು, 30 ವರ್ಷಗಳ ಹಿಂದೆ ಯಾವುದೇ ರೀತಿಯ ಎಂಡೋಕ್ರಿನಾಲಾಜಿ ಆಗಲೀ ಅಥವಾ ಔಷಧ ಇರಲಿಲ್ಲ, ಇಂದು ಮಧುಮೇಹಕ್ಕಾಗಿಯೇ ಅನೇಕ ಘಟಕಗಳ ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ. ಆದರೆ ನಿಖರವಾದ ದತ್ತಾಂಶ ಸಂಗ್ರಹಿಸಲು ಮುಂದಾಗುತ್ತಿಲ್ಲ. ಅಧ್ಯಯನಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ ಮಾಹಿತಿ ಸಂಗ್ರಹಿಸಬೇಕು. ಈಗ ಮಧುಮೇಹದಿಂದ ನರ, ಕಣ್ಣುಗಳಿಗೆ ಚಿಕಿತ್ಸೆ ನೀಡಬೇಕಾಗಿದೆ. ಎಂ ಡಿ ಮೆಡಿಸಿನ್ ಹಂತದಲ್ಲಿಯೇ ಎಂಡೋಕ್ರಿನಾಲಾಜಿ ಕೋರ್ಸ ಪ್ರಾರಂಭಿಸಿ ಎಂದ ಅವರು, ಮೂಲ ವಿಜ್ಞಾನ ಕ್ಕೆ ಒತ್ತು ನೀಡುತ್ತ, ಸಂಶೋಧನೆಗೆ ಕೈಕೊಳ್ಳಬೇಕೆಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಕಾಹೆರನ ಉಪಕುಲಪತಿ ಡಾ. ನಿತಿನ ಗಂಗಾನೆ ಅವರು ಮಾತನಾಡಿ, ದೇಶವು ಯುವ ವೈದ್ಯರನ್ನು ಹೊಂದಿದ್ದು, ಅಗತ್ಯ ಸೇವೆ ನೀಡಲು ಮಧುಮೇಹ ಹೊರತುಪಡಿಸಿ ಬೇರೆ ರೋಗಗಳಿಗೆ ಹೆಚ್ಚಿನ ಒತ್ತು ಸಿಗುತ್ತಿಲ್ಲ. ಮಧುಮೇಹದ ಕುರಿತು ಅನೇಕ ಜಾಹೀರಾತು ಕಂಡುಬರುತ್ತವೆ. ಆದರೆ ನೈಸರ್ಗಿಕವಾಗಿರುವ ರೋಗಗಳ ಕುರಿತು ಸಂಶೋಧನೆ, ಅದರಲ್ಲಿಯೂ ಕ್ಯಾನ್ಸರ್ ಕುರಿತು ಚಿಕಿತ್ಸೆ ಮತ್ತು ಸಂಶೋಧನೆ ಅಧಿಕಗೊಳ್ಳಲಿ ಎಂದ ಅವರು ಚಿಕಿತ್ಸೆ ಪಡೆಯುತ್ತಿರುವ ರೋಗಿಗಳ ಅಂಕಿಸಂಖ್ಯೆಗಳನ್ನು ಕಾಪಾಡಿ. ಭವಿಷ್ಯದಲ್ಲಿ ಕೃತಕಬುದ್ದಿಮತ್ತೆ ಅಧಿಕ ಬಳಕೆಯಾಗಲಿದೆ. ಮಧುಮೇಹವನ್ನು ಕೂಡ ಅದೇ ನಿರ್ವಹಣೆ ಮಾಡುವ ಕಾಲ ಬರಲಿದೆ. ಆದ್ದರಿಂದ ವೈದ್ಯರು ತಂತ್ರಜ್ಞಾನಕ್ಕೆ ಹೊಂದಿಕೊಳ್ಳಬೇಕೆಂದು ತಿಳಿಸಿದರು.

ಡಾ. ವಿಕ್ರಾಂತ ಘಟ್ನಟ್ಟಿ ಅವರು ಅತಿಥಿಗಳನ್ನು ಸ್ವಾಗತಿಸಿದರೆ, ಡಾ. ವಾನಿಶ್ರೀ ಗನಕುಮಾರ ಪರಿಚಯಿಸಿದರು. ವೇದಿಕೆ ಮೇಲೆ ಕಾಹೆರ ಕುಲಸಚಿವ ಡಾ. ವಿ ಎ ಕೋಠಿವಾಲೆ, ಡಾ. ವಿ ಡಿ ಪಾಟೀಲ,Áಸ್ಪತ್ರೆಯ ವೈದ್ಯಕೀಯ ನಿರ್ದೇಶಕರಾದ ಡಾ. ಎಂ ದಯಾನಂದ, ಡಾ. ಹೆಚ್ ಬಿ ರಾಜಶೇಖರ, ಡಾ. ವಾಗೀಶ ಅಯ್ಯರ, ಡಾ. ಸೋಮಶೇಖರ್ ರೆಡ್ಡಿ, ಡಾ. ಮಂಜುನಾಥ ಘೊರೊಷಿ, ಡಾ. ಪ್ರಸನ್ನಕುಮಾರ ಅವರು ಉಪಸ್ಥಿತರಿದ್ದರು. ಡಾ. ಮೀನಾಕ್ಷಿ ಹಾಗೂ ಡಾ. ಶ್ವೇತಾ ಪಾಶ್ಚಾಪೂರೆ ಅವರು ನಿರೂಪಿಸಿದರು. ದೇಶದ ಸುಮಾರು 600ಕ್ಕೂ ಅಧಿಕ ಪ್ರತಿನಿಧಿಗಳು ಭಾಗವಹಿಸಿದ್ದರು.

Popular Doctors

Related Articles